Skip to main content

Charm of ಚಾರ್ಮಾಡಿ

ಚಾರ್ಮಾಡಿ. ಈ ಹೆಸರು ಕೇಳಿದೊಡನೆ ಮನಸ್ಸಿನಲ್ಲಿ ಮೂಡುವ ಭಾವನೆಗಳು ಹಲವಾರು. ಉಲ್ಲಾಸ, ಉದ್ವೇಗ, ಸಂತೋಷ, ಭಯ ಎಲ್ಲವನ್ನೂ ಒಟ್ಟಿಗೆ ತಂದೊಡ್ಡುವ ಹೆಸರು ಚಾರ್ಮಾಡಿ.

ಚಾರ್ಮಾಡಿ ದಕ್ಷಿಣಕನ್ನಡ ಜಿಲ್ಲೆಯ ಬೆಳ್ತಂಗಡಿಯ ಒಂದು ಪುಟ್ಟ ಹಳ್ಳಿ. ಊರಿಗೊಂದು ಬಸ್ ಸ್ಟಾಪ್, ೨ ಪೆಟ್ಟಿ ಅಂಗಡಿ, 1 ಚಿಕನ್ ಶಾಪ್, ೨ ಬಾಂಧವರ ಕಾಕಾ ಹೋಟೆಲ್, ಒಂದಷ್ಟು ಹಸಿರು ಹೊದ್ದ ಮನೆಗಳು. ಚಾರ್ಮಾಡಿ ಊರೆಂದರೆ ಇಷ್ಟೇ.

ಆದರೆ ಚಾರ್ಮಾಡಿಗೆ ವಿಶ್ವ ವಿಖ್ಯಾತಿ ಬರಲು ಕಾರಣ ಅಲ್ಲಿ ಹಾದುಹೋಗುವ ರಾಷ್ಟ್ರೀಯ ಹೆದ್ದಾರಿ ೨೩೪. ಮಂಗಳೂರಿನಿಂದ ಚಿಕ್ಕಮಗಳೂರು ಮಾರ್ಗವಾಗಿ ಉತ್ತರ ಕರ್ನಾಟಕಕ್ಕೆ ಸಂಪರ್ಕ ಕಲ್ಪಿಸುವ ಎಕ್ಯ್ಕ ದೊಡ್ಡ ರಸ್ತೆ. ಚಾರ್ಮಾಡಿ ಊರಿನಿಂದ ಸ್ವಲ್ಪ ಮುಂದೆ ಸಾಗುತ್ತಿದ್ದಂತೆ ಶುರುವಾಗುವ ಏರು ರಸ್ತೆ, ತಿರುವುಗಳು, ದಟ್ಟ ಕಾನನ, ಯಾವಾಗಲೂ ಮುಸುಕಿದ ಮಂಜು. ಈ ಘಟ್ಟ ಪ್ರದೇಶಕ್ಕೆ ಚಾರ್ಮಾಡಿ ಘಾಟ್ ಎಂದು ಹೆಸರು ಬರಲು ಈ ಪುಟ್ಟ ಊರೇ ಕಾರಣ.

ಸಮುದ್ರದ ಮಟ್ಟದಿಂದ ೫೦೦ ಅಡಿ ಮೇಲಿರುವ ಚಾರ್ಮಾಡಿಯಿಂದ ಶುರುವಾಗುವ ಘಟ್ಟ ಕೊನೆ ಮುಟ್ಟುವುದು ಚಿಕ್ಕಮಗಳೂರು ಜಿಲ್ಲೆಯ ಕೊಟ್ಟಿಗೆಹಾರದ ಬಳಿ. ಕೊಟ್ಟಿಗೆಹಾರದ ಎತ್ತರ ಸುಮಾರು ೩೧೦೦ ಅಡಿ. ಕರ್ನಾಟಕದ ಅತಿ ದೊಡ್ಡ ಘಾಟಿ ಈ ಚಾರ್ಮಾಡಿ. ದೊಡ್ಡದು ಮಾತ್ರವಲ್ಲ ಅತ್ಯಂತ ವಿಹಂಗಮ ಕೂಡ.

ಕೊಟ್ಟಿಗೆಹಾರದದಿಂದ ಧರ್ಮಸ್ಥಳದ ಕಡೆ ಹೋಗಲು ೨-೩ ಕಿಲೋಮೀಟರು ದಾಟುತ್ತಿದ್ದಂತೆ ಶುರುವಾಗ ತಗ್ಗು ರಸ್ತೆ, ಭೀಕರ ತಿರುವುಗಳು, ಅಗಲವೇ ಇಲ್ಲದ ರಸ್ತೆ, ಕೆಳಗಿನಿಂದ ಉಸ್ಸಪ್ಪ ಎಂದು ಬರುವ ಗ್ಯಾಸ್ ಸಿಲಿಂಡರ್ ಹೊತ್ತ ದೊಡ್ಡ ಟ್ರಕ್ಕುಗಳು, ಪ್ರಯಾಣಿಕರ ವಾಂತಿಮಾಯವಾದ ಬಸ್ಸುಗಳು, ಮೊದಲಬಾರಿಗೆ ಘಟ್ಟ ಪ್ರದೇಶದಲ್ಲಿ ಗಾಡಿ ಓಡಿಸುತ್ತಿರುವ ಬಯಲು ಸೀಮೆಯ ಹೆದರಿದ ಡ್ರೈವರ್ಗಳು.. ಒಟ್ಟಿನಲ್ಲಿ ಚಾರ್ಮಾಡಿ ಘಾಟಿ ಒಂದು ವಿಚಿತ್ರ ಪ್ರಪಂಚ.

ಧರ್ಮಸ್ಥಳದಲ್ಲಿ ಹೊಟ್ಟೆ ಬಿರಿಯ ಊಟ ಮಾಡಿ ಉತ್ತರ ಕರ್ನಾಟಕಕ್ಕೆ ಇರುವ ನೂರಾರು ಬಸ್ಸುಗಳಲ್ಲಿ ಒಂದನ್ನು ಹತ್ತಿ ಸೀಟಿಗಾಗಿ ಕಿತ್ತಾಡಿ, ಎಲ್ಲೆಂದರಲ್ಲಿ ಲಗೇಜ್ ಇಟ್ಟು, ನನಗೆ ಕಿಟಕಿ ಸೀಟು ಎಂದು ಕಿತ್ತಾಡುವ ಆ ಮಕ್ಕಳಿಗೆ ಸಮಾಧಾನ ಪಡಿಸುವಷ್ಟರಲ್ಲಿ ಬಸ್ಸು ಹೊರಟು, ಟಿಕೆಟ್ ಎಂದು ಬರುವ ಕಂಡಕ್ಟರ್. ಅವನು ಮಾತಾಡುವ ಆ ಭಾಷೆಯೋ ಉಜಿರೆಯ ಆ ಅಜ್ಜನಿಗೆ ಅರ್ಥ ವಾಗಿಲ್ಲ. ಇಡೀ ಬಸ್ಸಿಗೆ ಟಿಕೆಟ್ ಹಂಚುವಷ್ಟರಲ್ಲಿ ಉಜಿರೆ ಬಂದಾಯ್ತು. ಇಷ್ಟು ಹೊತ್ತಿನವರೆಗೂ ಕಿಟಕಿಗಾಗಿ ಕಿತ್ತಾಡಿದ ಆ ಅಳುವ ಮಕ್ಕಳು ಆಗಲೇ ನಿದ್ದೆ ಮಾಡಿಯಾಯ್ತು. ಹೊರಗಿನಿಂದ ಬೀಸಿದ ಆ ತಂಗಾಳಿಗೆ ಬಸ್ಸಿನ ಎಲ್ಲರಿಗೂ ನಿದ್ದೆ ಹತ್ತುವಷ್ಟರಲ್ಲೇ ಬಂದಿದ್ದು ಚಾರ್ಮಾಡಿ ಊರು.

ಇಲ್ಲಿಂದ ಡ್ರೈವರ್ಗೆ ಚಿಂತೆ ಶುರು. ಅದರಲ್ಲೂ ಬಯಲು ಸೀಮೆ ಕಡೆ ಡ್ರೈವರ್ ಆಗಿದ್ದು ಈ ಕಡೆ ಬಂದಿದ್ದು ಇತ್ತೀಚೆಗಾದರೆ ಅವನ ಮುಖದ ಚಿಂತೆಯ ಗೆರೆಗಳು ಇಡೀ ಘಾಟಿಗೆ ಕಾಣಿಸುತ್ತೆ. ಎದುರಿಂದ ಬರುವ ಕಾಣದ ವಾಹನಗಳು, ತಿರುವು ಹೇಗಿದೆ ಎಂದೇ ಗೊತ್ತಾಗಾದೇ ನುಗ್ಗುವ ಹಳದಿ ಬೋರ್ಡ್ನ ಕಾರ್ ಗಳು. ಅಯ್ಯಪ್ಪ ಸೀಸನ್ನಲ್ಲಿ ಒಂದೇ ದಿನಕ್ಕೆ ೧೦ ದೇವಸ್ಥಾನ ನೋಡಲು ಹೋಗುವ ಆತುರಕ್ಕೆ ಯರ್ರಾ ಬಿರ್ರಿ ನುಗ್ಗುವ ಕುರಿಯಂತೆ ತುಂಬಿರುವ ಟ್ರ್ಯಾಕ್ಸ್ ಗಳು, ಮುಸುಕಿದ ಮಂಜು, ರಸ್ತೆ ಎಲ್ಲಿದೆ , ಕೊರಕಲು ಎಲ್ಲಿದೆ ಗೊತ್ತಾಗದ ರಸ್ತೆ, ಲಗೇಜ್ ಲೋಡ್ ಜಾಸ್ತಿ ಆಗಿ ಬುಸುಗುಡುವ ಬಸ್ಸು, ಅಲ್ಲೇ ರಸ್ತೆಯ ಮೇಲೆ ಕೆಟ್ಟು ನಿಂತ ಲಾರಿ, ಅದರಿಂದ ಉಂಟಾದ ಕಿಲೋಮೀಟರು ಉದ್ದದ ಟ್ರಾಫಿಕ್ ಜಾಮ್. ಎಂದೂ ಘಾಟಿಯಲ್ಲಿ ಓಡಾಡದ ಕಕ್ಕುವ ಜನರೆಷ್ಟೋ, ಧರ್ಮಸ್ಥಳ ತಿಂದಿದ್ದು ಜಾಸ್ತಿ ಆಗಿ ಕಕ್ಕುವ ಜನರೆಷ್ಟೋ. ಇಷ್ಟರ ಮಧ್ಯೆ ಸಮಾಧಾನ ಕೊಡುವ ಏಕೈಕ ವಿಷಯವೆಂದರೆ ಅದು ಸುತ್ತಲಿನ ನಿಸರ್ಗ.

ಚಾರ್ಮಾಡಿ ಘಾಟಿಯ ತಿರುವುಗಳು 

ಘಾಟಿ ಹತ್ತುವಶುರುವಿನಲ್ಲಿ ಮೊದಲು ಕಾಣುವ ಚೂಪಾದ ತುದಿಯ ಏರಿಕಲ್ಲು ಗುಡ್ಡ ಕೆರಳಿಸುವ ಕುತೂಹಲ ಅಪರಿಮಿತ. ಎಲ್ಲಿಂದ ನೋಡಿದರೋ ಯಾವ ದಿಕ್ಕಿಗೆ ನೋಡಿದರೂ ಒಂದೇ ರೀತಿ ಕಾಣುವ ಏರಿಕಲ್ಲು ಒಂದು ವಿಸ್ಮಯ. ಒಮ್ಮೆ ಕಾಡು ದಾಟಿ ಹುಲ್ಲುಗಾವಲು ಶುರುವಾಗುತ್ತಿದ್ದಂತೆ ಈ ಏರಿಕಲ್ಲು ಮಾಯ.

ಮೋಡದೊಂದಿಗೆ ಕಣ್ಣಾ ಮುಚ್ಛೇ ಆಡುತ್ತಿರುವ ಏರಿಕಲ್ಲು 

ಆಮೇಲಿನ ಪ್ರಪಂಚವೇ ಬೇರೆ. ಮಳೆಗಾಲ ಮುಗಿದ ತಕ್ಷಣ ಈ ರಸ್ತೆಯೆಯಲ್ಲಿ ಪ್ರಯಾಣಿಸುವುದೇ ಒಂದು ಸ್ವರ್ಗದಂತ ಅನುಭವ. ಹಸಿರು ಹೊದ್ದ ಹುಲ್ಲುಗಾವಲು, ಎಲ್ಲೆಲ್ಲಿ ಎದುರಾಗುವ ನೂರಾರು ಜಲಪಾತ, ಮುಖಕ್ಕೆ ಮುತ್ತು ಕೊಡುವ ಮೋಡಗಳು, ತಣ್ಣಗೆ ಬೀಸುವ ಗಾಳಿ, ಆಗಾಗ ಬೀಳುವ ಮಳೆ ಇದೆಲ್ಲ ಅನುಭವಿಸಿಯೇ ಸವಿಯಬೇಕು.

ಸುಮಾರು ೨೦ ಕಿಲೋಮೀಟರ್ಗಳ ಈ ಏರುವ ದಾರಿಯ ಪಯಣದ ಕೊನೆ ಕೊನೆಗೆ ಸಿಗುವುದು ಅಣ್ಣಪ್ಪನ ದೇವಸ್ಥಾನ. ಇಲ್ಲಿ ಹೋಗೋ ಪ್ರತಿಯೊಂದು ಗಾಡಿ ಕೂಡ ಇಲ್ಲಿ ನಿಂತು ನಮಸ್ಕಾರ ಮಾಡಿ ಹೋಗೋದು ಪದ್ಧತಿ. ದೇವಸ್ಥಾನದ ಪಕ್ಕದಲ್ಲೇ ಇರೋ ಪುಟ್ಟ ಜಲಪಾತ ನೋಡಲು ಅದ್ಭುತ. ಪುಟ್ಟದಾದರೂ ಅಂದ ಚಂದದಲ್ಲಿ ಯಾವುದಕ್ಕ್ಕೂ ಕಡಿಮೆ ಇಲ್ಲ. ಕೈಗೆಟುಕುವ ನೀರು ಪ್ರಯಾಣಿಕರ ದಾಹ ತಣಿಸುವ ಆಪತ್ಬಾಂಧವ.

ಇಲ್ಲಿಂದ ಮುಂದೆ ಇರುವುದು ಅಲೆಕಾನ್ ಹೊರಟ್ಟಿ. ಇಲ್ಲಿಂದ ಎಡಕ್ಕೆ ಸಾಗುವ ಮಣ್ಣು ಕಲ್ಲಿನ ರಸ್ತೆಯ ಗಮ್ಯ ಅಲೆಕಾನ್ ಎಸ್ಟೇಟ್. ಇಲ್ಲಿರುವ ಪುಟ್ಟ ಊರು ಇರೋದು ಕಣಿವೆಯೊಗಳೇ.

ಚಾರ್ಮಾಡಿಯ ಶಿಖರಗಳಾದ ಬಾಳೆ ಕಲ್ಲು, ಜೇನುಕಲ್ಲು, ಕೊಡೆ ಕಲ್ಲು ಗಳಿಗೆ ದಾರಿ ಇದೇ ರಸ್ತೆಯಲ್ಲೇ. ಸಮುದ್ರ ಮಟ್ಟದಿಂದ ಸುಮಾರು ೫೦೦೦ ಅಡಿ ಎತ್ತರದಲ್ಲಿ ನಿಂತು ಸುತ್ತಲೂ ನೋಡುವ ಅನುಭವ ವರ್ಣಿಸಲಸದಳ. ಮುಂಗಾರಿನ ಮೋಡಗಳ ಮೇಲೆ ನಿಂತು ಎದುರು ಕಾಣುವ ಏರಿಕಲ್ಲು, ಸುತ್ತಲೂ ಕಾಣುವ ಚಾರ್ಮಾಡಿಯ ವಿವಿಧ ಶಿಖರಗಳು, ಎಡಕ್ಕೆ ನೋಡಿದರೆ ಅಮೇದಿಕಲ್ಲು, ಎತ್ತಿನಭುಜ, ಬಲಕ್ಕೆ ನೋಡಿದರೆ ಕುದುರೆಮುಖದ ಶ್ರೇಣಿ, ಬಂಡಾಜೆಯ ಶ್ರೇಣಿ, ಮೇರುತಿ ಪರ್ವತದ ಶಿಖರಗಳು, ಮಾತಿನಲ್ಲಿ ಹೇಳಿ ಪ್ರಯೋಜನವಿಲ್ಲ ಬಿಡಿ.

ಬಾಳೆ ಕಲ್ಲು ಗುಡ್ಡದ ವಿಹಂಗಮ ನೋಟ. 

ಇಲ್ಲಿಂದ ಕೆಳಗಿಳಿದು ಹಾಗೆ ಮುಂದುವರೆದರೆ ಕೆಳಗಡೆ ಇರೋದು ಅಲೆಕಾನ್ ಜಲಪಾತ. ರಸ್ತೆಗೆ ಕೇವಲ ಶಬ್ದ ಮಾತ್ರ ಕೇಳುವ ಈ ಜಲಪಾತ ನೋಡಲು ರಸ್ತೆ ಬಿಟ್ಟು ಕೆಳಗೆ ಇಳಿಯಬೇಕು. ಜಾರುವ ಮಣ್ಣಿನ ಮೇಲೆ ಸಿಗುವ ಮರದ ರೆಂಬೆಯೋ ಹುಲ್ಲೋ ಹಿಡಿದು ಇಳಿದು ನೋಡಿದರೆ ಜಲಪಾತ ಒಂದು ಅದ್ಭುತ.

ಈ ಚಾರ್ಮಾಡಿ ಘಾಟಿ ಇನ್ನೇನು ಮುಗಿಯಿತು ಎನ್ನುವಾಗ ಎಡಗಡೆ ಗುಡ್ಡದ ಮೇಲೆ ಕಾಣುವುದು ಮಲಯ ಮಾರುತ. ಕರ್ನಾಟಕ ಫಾರೆಸ್ಟ್ ಡಿಪಾರ್ಟ್ಮೆಂಟ್ ಗೆ ಸೇರಿದ ಈ ಗೆಸ್ಟ್ ಹೌಸ್ ನಿಂದ ಕಾಣುವ ಪ್ರಕೃತಿಯ ಚಂದಕ್ಕೆ ಬೇರೆ ಹೋಲಿಕೆ ಇಲ್ಲ. ಮುಂಗಾರಿನ ಶುರುವಿನಲ್ಲಿ ಇಲ್ಲಿ ನಿಂತು ನುಗ್ಗಿ ಬರುವ ಮಾರುತಗಳ ಅಂದ ಸವಿದವರಿಗೆ ಗೊತ್ತು. ಇಲ್ಲಿ ನಿಂತರೆ ನೀವು ಏರಿ ಬಂದ ಘಾಟಿಯ ಪೂರ್ಣ ಚಿತ್ರ ಕಣ್ಣೆದುರಿಗೆ.
ಮಲಯಾ ಮಾರುತದಿಂದ ಕಾಣುವ ಚಾರ್ಮಾಡಿ ಘಾಟಿ 

ಮಲಯ ಮಾರುತದಿನ ಮುಂದೆ ಘಾಟಿಯ ಏರು ಹಾದಿ ಮುಗಿದು ಬರುವ ಊರು ಕೊಟ್ಟಿಗೆಹಾರ. ಇಲ್ಲಿ ಎಡಕ್ಕೆ ತಿರುಗಿ ಮುಂದೆ ಹೋದರೆ ಶೃಂಗೇರಿ, ಹೊರನಾಡು, ಕುದುರೆಮುಖಕ್ಕೆ ಹೋಗುವ ಹಾದಿ.

ಘಟ್ಟ ಹತ್ತಿ ಸುಸ್ತಾಗಿ ಬಂದ ಬಸ್ಸು ಉಸ್ಸಪ್ಪ ಎಂದು ನಿಂತರೆ, ವಾಂತಿ ಮಾಡಿ ಸುಸ್ತಾದ ಜನ ಶೌಚಾಲಯಕ್ಕೆ ಓದುವ ದೃಶ್ಯ ಸಾಮಾನ್ಯ. ಕೊಟ್ಟಿಗೆಹಾರ ಅಂತ ದೊಡ್ಡ ಊರೇನಲ್ಲ. ಸುಸ್ತಾಗಿ ನಿಲ್ಲುವ ಬಸ್ಸುಗಳಿಂದಲೇ ಪ್ರವರ್ಧಮಾನಕ್ಕೆ ಬಂದ ಊರಿದು. ಇಲ್ಲಿ ಸಿಗುವ ನೀರು ದೋಸೆಗೆ ಮಾರು ಹೋಗದ ಜನರಿಲ್ಲ.

ಕೈ ಬೀಸಿ ಕರೆಯುವ ಹತ್ತಾರು ಅಂಗಡಿಗಳಲ್ಲಿ ನೊಣ ಕಡಿಮೆ ಇರುವ ಅಂಗಡಿಯೊಂದನ್ನು ಕೂಲಂಕುಷವಾಗಿ ಪರೀಕ್ಷಿಸಿ ಒಳ ಹೋಗುತ್ತೀರಿ. ಅಲ್ಲಿ ಕಾಣುವ ಭಜ್ಜಿ ಬೋಂಡಾ ಯಾವತ್ತು ಮಾಡಿಟ್ಟದ್ದೆಂದು ಅಂಗಡಿಯವನಿಗೇಮರೆತು ಹೋಗಿದೆ. ನಿಮ್ಮನ್ನು ಕಂಡು ಹರ್ಷಗೊಂಡ ಅಂಗಡಿಯವನು ನೀವು ಕೇಳುವ ಮುಂಚೆಯೇ ಕಾದ ಕಾವಲಿಗೆ ನೀರು ಸುರಿದು ಚೊಯ್ಯ್ಯನೆ ಶಬ್ದ ಮಾಡಿ ನಿಮ್ಮ ಗಮನ ನೀರು ದೋಸೆಯ ಮೇಲೆ ಹೋಗುವಂತೆ ಮಾಡುತ್ತಾನೆ, ಬಿಳಿ ಬಣ್ಣದ ದ್ರವವೊಂದನ್ನು ಕಾದ ಕಾವಲಿಯ ಮೇಲೆ ಸುರಿದು ನಿಮಷವೊಂದರಲ್ಲಿ ನಿಮ್ಮ ತಟ್ಟೆಯ ಮೇಲೆ ಹಾಕುತ್ತಾನೆ. ಏನಾಗುತ್ತಿದೆ ಎಂದು ಗೊತ್ತಾಗುವಷ್ಟರಲ್ಲಿ ನಿಮ್ಮ ದೋಸೆ ಖಾಲಿ ಆಗಿರುತ್ತದೆ. ಮತ್ತದೇ ಪುನರಾವರ್ತನೆ. ಕಂಡಕ್ಟರ್ ಸೀಟಿ ಹೊಡೆಯುವವರೆಗೂ ದೋಸೆ ತಿನ್ನುವ ನೀವು ಆತುರದಲ್ಲಿ ಹೊರಡುತ್ತೀರಿ. ಅಂಗಡಿಯವ ಹೇಳಿದ ಬಿಲ್ ಕೇಳಿ ನಿಮ್ಮ ಎದೆ ಒಡೆಯುವುದು ಗ್ಯಾರಂಟೀ. ಆದ್ರೂ ತಿಂದಾಗಿದೆ, ಇನ್ನೇನು ಮಾಡುವುದು, ಕೇಳಿದಷ್ಟು ಕೊಟ್ಟು ಹೊರಡುತ್ತೀರಿ.

ಜನರ ತಲೆ ಎಣಿಸಿದ ಕಂಡಕ್ಟರ್ ಸೀಟಿ ಊದಿ ಬಸ್ಸು ಹೊರಟಾಗ ಸುಮಾರು ಎರಡು ಘಂಟೆಗಳಷ್ಟು ಕಾಲ ನಿಮ್ಮನ್ನಾವರಿಸಿದ್ದ ಚಾರ್ಮಾಡಿಯ ಸಂಬಂಧ ಇಲ್ಲಿಗೆ ಮುಗಿಯುತ್ತದೆ.  

ನಿಮಗೇನೋ ಚಾರ್ಮಾಡಿಯೊಂದಿಗೆ ಸಂಬಂಧ ಕಡಿಯಿತು, ಆದ್ರೆ ಪುನಃ ಅದೇ ದಾಯಿಯಲ್ಲಿ ಬರುವ ಡ್ರೈವರ್ ಕಂಡಕ್ಟರ್ ನ ಕಥೆ ಹೇಳಿ. ಅವರಿಗೋ ದಿನಾ ಇದೆ ನೋಡಿ ನೋಡಿ ಬದುಕು ಎಷ್ಟು ರೋಸಿ ಹೋಗಿರಬೇಡ. ಆದರೂ ಅವರೂ ದಿನಕ್ಕೊಂಡರೂ ರೋಚಕ ಘಟನೆಗೆ ಸಾಕ್ಷಿಯಾಗುವುದು ನಿಶ್ಚಿತ. 





Comments

Popular posts from this blog

DIY Treks in Western Ghats of Karnataka

Hailing from a village in Western Ghats of Karnataka, I have natural love for Mountains, Waterfalls and Forests. I started trekking from January of 2008 and have never looked back. I have done around 40 treks in Karnataka and 7 treks in the mighty Himalayas. This blog series is all about Do-It-Yourself treks in the Western Ghats of Karnataka. The List includes some of the unpopular treks. Let's Begin. Kudremukh Trek  Standing tall at an altitude of 1895 meters MSL, Kudremukh is a Moderate-Difficult trek in Mudigere Taluk of Chikmagalur Dist. Kudremukh peak lies inside Kudremukh National Park, a Tiger reserve and wildlife sanctuary. Permission from Range Forest Office (RFO) and a guide accompanying you is a must to trek inside the WLS. Permissions are usually given from 1st May to 31st December. Permissions can be directly acquired from RFO, Kudremukh Office. Base camp, Mullodi is 6km from Balgal. Balgal is around 9 kilometers from Kalasa on Kalasa - Kudremukh Road...

(Grand)Parenting

Ever since we became parents of this cute little fireball, there are a lot of questions we have been asking ourselves about parenting - are we doing it right? Are we overdoing or underdoing parenting? Where are we going wrong etc. Fortunately for us and Aarya, apart from her grandparents (my parents and Bhagya's parents), she has another pair of grandparents whom she affectionately calls Gijja and Pajjibajji, who have guided us a lot about parenting. More than teaching, we have seen their parenting style and feel it's so apt. They keep reminding us to let our child be fearless, exploratory and curious. As an example, we went on a trip with another couple, their kids and grandparents. Their little one was almost of Aarya's age, may be a few months older. We went to a gift shop and both kids were curious about some glass toys. Apart from telling their children to not touch the item, the granny told Aarya that she should not touch it and wanted if she wants wanted, the shipown...

ಶರಾವತಿ - The story behind Power Generation.

ಶರಾವತಿ ನದಿ ಕರ್ನಾಟಕದ ಜೀವ ನದಿಗಳಲ್ಲೊಂದು, ನೀರಾವರಿ, ಮೀನುಗಾರಿಕೆಗಿಂತ ವಿಶಾಲ ಕರ್ನಾಟಕಕ್ಕೆ ವಿದ್ಯುತ್ ಸರಬರಾಜು ಮಾಡುವ ಹಲವಾರು ಜಲವಿದ್ಯುತ್ ಯೋಜನಗಳಿಗೆ ಮೂಲ ಈ ಶರಾವತಿ ನದಿ. ಬಹುಶಃ ಜಲವಿದ್ಯುತ್ ಉತ್ಪಾದನೆಗಾಗಿಯೇ ನಿರ್ಮಿಸಿದ ಹಲವಾರು ದೊಡ್ಡ ಆಣೆಕಟ್ಟೆಗಳಿಗೆ ಮೂಲ ಈ ಶರಾವತಿ. ಶರಾವತಿ ಕಣಿವೆ  ತೀರ್ಥಹಳ್ಳಿ ತಾಲ್ಲೂಕಿನ ಅಂಬುತೀರ್ಥದಲ್ಲಿ ಉಕ್ಕುವ ಶರಾವತಿಯ ಹುಟ್ಟಿನ ಹಿಂದೆ ಒಂದು ಕಥೆಯೇ ಇದೆ. ಸೀತೆಯ ಬಾಯಾರಿಕೆ ತಣಿಸಲು ರಾಮ ಹೂಡಿದ ಬಾಣ ಅರ್ಥಾತ್ ಶರದಿಂದ ಹುಟ್ಟಿದ ಚಿಲುಮೆ ಈ ಶರಾವತಿ. ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ, ಹೊಸನಗರ, ಸಾಗರ ಜಿಲ್ಲೆಯ ಮೂಲಕ ಹರಿದು ಗೇರುಸೊಪ್ಪೆಯ ಬಳಿ ಉತ್ತರ ಕನ್ನಡ ಜಿಲ್ಲೆಯ ಪ್ರವೇಶ ಮಾಡುವ ಶರಾವತಿ ಸಮುದ್ರ ಸೇರುವುದು ಹೊನ್ನಾವರದ ಬಳಿ. ವಿಶ್ವ ವಿಖ್ಯಾತ ಜೋಗ ಜಲಪಾತದ ಕಾರಣಕರ್ತೆಈ ಶರಾವತಿ. ಜೋಗದಲ್ಲಿ ೮೩೦ ಅಡಿಗಳಷ್ಟು ಎತ್ತರದಿಂದ ಧುಮುಕುವ ಶರಾವತಿ ಭಾರತದ ಎತ್ತರದ ಸಿಂಗಲ್ ಡ್ರಾಪ್ ಜಲಪಾತ. ಮಳೆಗಾಲದಲ್ಲಿ ಜೋಗದ ವೈಭವ ಪದಗಳಿಗೆ ನಿಲುಕದ್ದು. ಶರಾವತಿಯ ಪಾತ್ರದ ತುಂಬಾ ತಲೆ ಎತ್ತಿರುವ ಜಲವಿದ್ಯುದಾಗರಗಳು ೩. ಲಿಂಗನಮಕ್ಕಿ ಜಲಾಶಯದ ಘಟಕ, ಜೋಗದ ಉತ್ಪಾದನಾ ಘಟಕ, ಗೇರುಸೊಪ್ಪದ ಉತ್ಪಾದನಾ ಘಟಕ. ಒಟ್ಟು ಉತ್ಪಾದನೆಯಾಗುವ ವಿದ್ಯುತ್  ೧೩೪೦ ಮೆಗಾ ವಾಟ್. ಜೋಗದ ಉತ್ಪಾದನಾ ಘಟಕದ್ದು ಉತ್ಪಾದನೆಯಲ್ಲಿ ಮೇಲುಗೈ. ೧೦೩೫ ಮೆಗಾ ವಾಟ್ ಗಳಷ್ಟು ವಿದ್ಯುತ್ ಉತ್ಪಾದಿಸುವಜೋಗದ ಮಹಾತ್...